ಬುಧವಾರ, ಡಿಸೆಂಬರ್ 29, 2010

ನಿನ್ನೆ

ಏನೋ ಒಂದು ಆತಂಕ. ಕುಳಿತಲ್ಲೇ ಕೈ ಬೆವರುತ್ತಿದೆ. ಸುತ್ತ ಮುತ್ತ ಇರುವವರೆಲ್ಲಾ ಗಡಿಬಿಡಿಯಲ್ಲಿ ತಮ್ಮ ಚೀಲದಿಂದ ಹೋಂವರ್ಕ್ ಪುಸ್ತಕ ಹೊರ ತೆರೆಯುತ್ತಿದ್ದರೆ ನಾನು ಹೆಸರನ್ನುಳಿದು ಮತ್ತೇನನ್ನೂ ಬರೆದಿರದ ಪುಸ್ತಕವನ್ನು ಕೈನಲ್ಲಿ ಹಿಡಿದು ಕುಳಿತ್ತಿದ್ದೆ. ಹೋಂವರ್ಕ್ ಮಾಡಿಲ್ಲ...

ಮಿಸ್ ಎಲ್ಲರಿಗೂ ತಮ್ಮ ಪುಸ್ತಕವನ್ನು ಅವರ ಮೇಜಿನ ಮೇಲೆ ಇಡಲು ಹೇಳುತ್ತಿದ್ದಾಗ ನನ್ನ ಹೋಂವರ್ಕ್ ಪುಸ್ತಕದ ಗರಿಗರಿ ಹಾಳೆಗಳ ವಾಸನೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ಒಬ್ಬೊಬ್ಬರಾಗಿ ಪುಸ್ತಕ ಇಟ್ಟು ಹಾಜರಿ ಹಾಕಿಸಿ ಬರುತ್ತಿದ್ದಾರೆ. ನನ್ನ ಪಕ್ಕದವ ಈಗಷ್ಟೇ ಎದ್ದು ಹೋದ, ಮುಂದಿನವ ನಾನೇ... ಕೈ ನಡುಗುತ್ತಿವೆ. ಗಂಟಲು ಒಣಗಿ ಬಹಳ ಹೊತ್ತಾಗಿದೆ. ಕಣ್ಣು ನೀರ ಹನಿಯಿಂದ ಮಂಜಾಗುತ್ತಿದೆ. ನನ್ನ ಸರದಿ...

ನಿನ್ನಿಂದಲೇ... ನಿನ್ನಿಂದಲೇ..

ಹುಲಿಯ ಮುಂದೆ ನಿಂತ ಹರಿಣದ ಮನಕ್ಕೆ ಆಹ್ಲಾದಕರವಾದ ಎಲ್ಲಿಂದಲೋ ತೇಲಿ ಬಂದ ಸಂಗೀತ ಸಾಂತ್ವನದ ಸಿಂಚನ ಮಾಡಿತ್ತು. ಹಾಡಿನಲ್ಲಿ ಮೈರೆಯಬೇಕೆನ್ನುವಷ್ಟರಲ್ಲಿ ಗಾಢ ಮೌನ.

"ನೇಕ್ಸ್ಟ್..."

ಮಿಸ್‌ನ ಗಟ್ಟಿಯಾದ ದ್ವನಿ ನನ್ನನ್ನು ಅಷ್ಟೇ ಗಟ್ಟಿಯಾಗಿ ನಡುಗಿಸಿಬಿಟ್ಟಿತು. ನನ್ನ ಖಾಲಿಪುಸ್ತಕ ಹಿಡಿದು ನಿಧಾನವಾಗಿ ಅವರೆಡೆಗೆ ಹೊರಟೆ. ನನ್ನ ಎದೆಯ ಬಡಿತ ಜೋರಾಗುತ್ತಿದೆ. ನಾಲಿಗೆ ಒಣಗುತ್ತಿದೆ. ಏನೆಂದು ಹೇಳಲಿ? ಹತ್ತು ಹಲವು ಕಾಲ್ಪನಿಕ ಕಾರಣಗಳನ್ನು ಮನ್ನಸ್ಸು ಯೋಚಿಸುತ್ತಿತ್ತು.

ನಿನ್ನಿಂದಲೇ... ನಿನ್ನಿಂದಲೇ...

ಅರೇ, ಈ ಹಾಡನ್ನು ಎಲ್ಲೋ ಕೇಳಿದ್ದೀನಲ್ಲಾ!

ನನ್ನ ಖಾಲಿ ಪುಸ್ತಕವನ್ನು ಅವರ ಮೇಜಿನ ಮೇಲಿಟ್ಟೆ. ಅಂದಿನ ಹೋಂವರ್ಕ್ ಇರುವ ಪುಟವನ್ನು ಎಲ್ಲರೂ ತೆರೆದಿಟ್ಟಿದ್ದರು. ಮಿಸ್ ನನ್ನನ್ನೇ ನೋಡುತ್ತಿದ್ದರೆ ನಾನು ಅವರ ಕೈನಲ್ಲಿರುವ ಬೆತ್ತದತ್ತ ನೋಡಿ ಏನೂ ಮಾಡಲೂ ತೋಚದೆ ನಿಂತುಬಿಟ್ಟಿದ್ದೇನೆ.

ಜ್ವರ ಬಂದಿತ್ತು ಅಂತ ಹೇಳಲಾ, ಪುಸ್ತಕ ಕಳೆದು ಹೋಗಿತ್ತು ಆದ್ದರಿಂದ ಇಂದು ಹೊಸ ಪುಸ್ತಕ ಇಟ್ಟಿದ್ದೇನೆಂದು ಹೇಳಲಾ ಅಥವಾ ತೆರೆದಿರುವ ತರಗತಿಯ ಬಾಗಿಲಿನಿಂದ ಓಡಿಹೋಗಲಾ? ಊಹೂಂ, ಯಾವುದಕ್ಕೂ ಧೈರ್ಯ ಸಾಲುತ್ತಿಲ್ಲ. ಬೆತ್ತದೇಟು ಬೀಳುವುದು ಕಾಯಂ...

ನಿನ್ನಿಂದಲೇ... ನಿನ್ನಿಂದಲೇ...

ಅರೇ ಇದು ನನ್ನ ಮೊಬೈಲ್‌ನ ಅಲಾರಂ ಟ್ಯೂನ್. ನಾನು ಕನಸು ಕಾಣುತ್ತಿದ್ದೇನೆಯೇ? ಹೌದು ನಾನು ಶಾಲಾ ಮಟ್ಟವನ್ನು ಮೀರಿ ಇಂಜಿನೀರಿಂಗ್ ಮುಗಿಸಿ ಬಹಳ ವರ್ಷಗಳೇ ಆಯ್ತಲ್ಲಾ!

ಎಲ್ಲಿಂದಲೋ ಕಳಚಿಬಿದ್ದ ಅನುಭವ. ತನ್ನಪಾಡಿಗೆ ಹಾಡಿಕೊಳ್ಳುತ್ತಿದ್ದ ಮೊಬೈಲನ್ನು ಮಲಗಿಸಿ ಮತ್ತೆ ಹೊದಿಕೆ ಎಳೆದುಕೊಂಡು ಮಲಗಿದೆ. ನಿದ್ರೆ ಹತ್ತಲಿಲ್ಲ. ಏನನ್ನೋ ಕಳೆದುಕೊಂಡ ಬೇಸರ. ನೂರು ಬೆತ್ತದೇಟು ಬಿದ್ದರೂ ಸರಿ, ಕಳೆದು ಹೋದ ಆ ದಿನಗಳೊಳಗೆ ಧುಮುಕಬೇಕೆನ್ನುವ ಹಂಬಲ. ಬೆತ್ತದೇಟಿಗೆ ಹೆದರಿ ಬಿಗಿ ಹಿಡಿದಿದ್ದ ಮುಷ್ಟಿಯನ್ನು ನಿಧಾನವಾಗಿ ಸಡಿಲಿಸಿದೆ...

ಮಂಗಳವಾರ, ಡಿಸೆಂಬರ್ 7, 2010

ಮೌನದ ಮಾತಲ್ಲಿ......

ಕಣ್ಣುಗಳೆರಡು ಒಂದನ್ನೊಂದು ಸಂಧಿಸಲಾಗದೆ ಗೋಡೆಗಳ ಮೇಲಿನ ಚಿತ್ರಪಟಗಳ ಮೊರೆ ಹೋಗಿದ್ದವು. ಅಲ್ಲಿದ್ದ ಇಬ್ಬರ ನಡುವೆ ಇದ್ದುದು ಕೃತಕ ನಗೆ ಮಾತ್ರ. ಆದರೆ ಆ ನಗೆಯ ಮರೆಯಲ್ಲಿ ತುಂಬಿಕೊಂಡಂಥವು ನೂರಾರು ಭಾವಗಳು. ತಮ್ಮನ್ನು ತಾವೇ ಎಂದು ಬಿಂಬಿಸಿಕೊಳ್ಳಲಾರದೆ ತಾತ್ಕಾಲಿಕ ನಗೆಯ ರೂಪದ ಮುಖವಾಡ ತೊಟ್ಟಿದ್ದವು. ಆದರೆ ಮೊಗವಾಡದ ಒಳಗಿಂದ ಇಣುಕಿ ನೋಡುವ ಕಣ್ಣುಗಳು ಅದ್ಹೇಗೆ ತಾನೇ ಸುಮ್ಮನಿದ್ದಾವು?! ತಮಗರಿವಿಲ್ಲದಂತೆ ಜಾರಿಸಿದವು ಕಣ್ಣೀರ ಹನಿಗಳನು ತುಂಬಿಕೊಂಡು ಭಾರದ ಭಾವಗಳನು. ಆ ಕ್ಷಣದಲ್ಲಿ ಅಲ್ಲೊಂದು ದಿವ್ಯ ಮೌನ. ಅಲ್ಲಿದ್ದುದು ಕೇವಲ ಮೌನದ ಮಾತು. ಭಾವನೆಗಳು ಬೇರೆಯಾದರೇನು, ದುಃಖದ ಮೂಲ ಒಂದು ಎಂದು ಸಾರಿದ್ದವು ಜಾರಿ ಬಿದ್ದ ಹನಿಗಳು. ಬಿದ್ದ ಹನಿಗಳು ಒಂದಾಗಿ ಹೇಳಿದವು ನೊಂದ ಹೃದಯಗಳೇ ಒಂದಾಗಿ ಎಂದು. ಆದರೆ ಅದಾಗಲೇ ನೊಂದ ಹೃದಯಗಳು ಬೆಂದು ಹೋಗಿದ್ದವು. ಕಣ್ಣೀರ ಹನಿಗಳ ಕಥೆಯ ಕೇಳುವ ಮನಸ್ಸು ಕರಗುವ ಬದಲು ಸುಟ್ಟು ಕರಕಲಾಗಿದ್ದಿತು. ಕೋಪ ತಾಪಗಳು ಸುಟ್ಟು ಬೂದಿಯಾಗಿದ್ದವು. ಎರಡೂ ಹೃದಯಗಳಲ್ಲೂ ಈಗ ಯಾವ ಕೋಪವಿಲ್ಲ, ತಾಪವಿಲ್ಲ. ಹಾಗಾದರೆ ಆ ಎರಡು ಮನಗಳು ಮತ್ತೆ ಸೇರಿಯಾವೆ? ಒಂದಾಗಲು ಬಯಸಿ ಹುಡುಕುತ್ತಿವೆ ತಮ್ಮ ಕಳೆದು ಹೋದ ಪ್ರೀತಿಯನ್ನು, ಊಹುಂ... ಸಿಗಲಿಲ್ಲ! ಅರಿವಾಯಿತು ಎರಡೂ ಹೃದಯಗಳಿಗೆ ತಮ್ಮ ಪ್ರೀತಿ ಸಿಗಲು ಸಾಧ್ಯವೇ ಇಲ್ಲ! ತಾವೇ ಹಚ್ಚಿದ ಕೋಪ ತಾಪಗಳ ಕೆನ್ನಾಲಿಗೆಯು ತಮ್ಮ ಮಂಜಿನಂಥ ಪ್ರೀತಿಯನ್ನು ಎಂದೋ ಕರಗಿಸಿ ಇನ್ನಿಲ್ಲವಾಗಿಸಿದೆ ಎಂದು ನಶ್ವರತೆಯ ಬಿಂದುವಿನಲ್ಲಿ ಕಣ್ಣುಗಳು ಸಂಧಿಸಿ ಮುಚ್ಚಿದವು ಶಾಶ್ವತವಾಗಿ.


*** (ಇದೊಂದು ಎರಡು ಆಯಾಮಗಳ ಕಥೆ) ***


ಕಳೆದ ವರ್ಷ ಇದೇ ಸಮಯದಲ್ಲಿ ಕೋಪನ್‌ಹೇಗನ್‌ನಲ್ಲಿ ಹವಾಮಾನ ಶೃಂಗಸಭೆ ನಡೆಯಿತು. ಅದರಲ್ಲಿ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾಗವಹಿಸಿದ್ದವು. ನನ್ನ ಕಥೆಯಲ್ಲಿ ಈ ಎರಡು ಬಣಗಳೇ ಎರಡು ಹೃದಯಗಳಾಗಿ ಮಿಡಿದಿವೆ. ಎಲ್ಲ ರಾಷ್ಟ್ರಗಳಿಗೂ ಹವಾಮಾನ ವೈಪರೀತ್ಯದ ಪರಿಣಾಮದುಂಟಾಗುವ ಭಾವನೆಗಳು ಒಳಗೆ ತುಂಬಿಕೊಂಡಿದ್ದರೂ ಎಲ್ಲರೂ ಕೃತಕ ನಗೆಯ ಮೂಲಕ ಸವಾಲನ್ನು ಹಗುರಾಗಿ ಸ್ವೀಕರಿಸಿದಂತೆ ತೋರ್ಗೊಡುತ್ತಿದ್ದರು. ಹವಾಮಾನ ವೈಪರೀತ್ಯದ ಗಹನತೆ ಅರಿತಾಗ ಎಲ್ಲರಿಗೂ ಒಳಗೊಳಗೇ ಆತಂಕ, ಆದರೆ ಜವಾಬ್ದಾರಿಯನ್ನು ಹೊರಲಾರದೆ ದಿವ್ಯ ಮೌನ. ಎಲ್ಲ ರಾಷ್ಟ್ರಗಳ ಅವಶ್ಯಕತೆ ಬೇರೆಯಾದರೂ ನಾಳೆ ನಾವು ಅನುಭವಿಸಬೇಕಾಗಿರುವ ದುಃಖದ ಮೂಲ ಒಂದೇ ಎಂದು ಹೇಳುತ್ತಿವೆ, ಆಗಲೇ ಅನುಭವಿಸುತ್ತಿರುವ ರಾಷ್ಟ್ರಗಳು. ಎಲ್ಲ ರಾಷ್ಟ್ರಗಳೂ ಅದನ್ನು ಉಪೇಕ್ಷಿಸಿ ತಮ್ಮ ಪ್ರತಿಷ್ಠೆಯನ್ನು ತೋರಲು ಸಮಸ್ಯೆಯನ್ನು ಹಾಗೇ ಬಿಟ್ಟಿದ್ದಾರೆ ಎಂದು ಭಾವಿಸಿ ಅದರ ಅಂತ್ಯವೇನಾಗಬಹುದೆಂಬುದನ್ನು ಕಥೆಯು ಹೇಳುತ್ತದೆ. ತಾವೇ ಮುಂದೊಂದು ದಿನ ತಮ್ಮ ಪ್ರತಿಷ್ಠೆ, ಅಹಂ (ಕೋಪ-ತಾಪ) ಅನ್ನು ತೊರೆದು ಒಂದಾಗಿ ಭುವಿಯ ರಕ್ಷಣೆಗೆ ಬಂದರೂ ಭೂ ತಾಪದಿಂದ ಹಿಮವೆಲ್ಲ ಕರಗಿ ಜಗತ್ತೇ ಮುಳುಗಿ ಹೋಗಿರುತ್ತದೆ. ಆಗ ಎಲ್ಲರೂ ನಿಸ್ಸಹಾಯಕರಾಗಿ ಕಣ್ಮುಚ್ಚಿ ಚಿರನಿದ್ರೆಗೆ ಜಾರಬೇಕಾಗುತ್ತದೆ.

ಈಗ ಈ ದೃಷ್ಟಿಕೋನದಿಂದ ಮತ್ತೊಮ್ಮೆ ಕಥೆಯನ್ನು ಓದುವಿರಾ?

ಭಾನುವಾರ, ನವೆಂಬರ್ 14, 2010

ಹರೆಯ ತುಂಬಿ ಬಂದಿತ್ತು

ಕನಸು ನಕ್ಕು ನಲಿದಿತ್ತು
ಪ್ರೀತಿ ಉಕ್ಕಿ ಹರಿದಿತ್ತು
ಮನಸು ವಿರಹದಿ ನಲುಗಿತ್ತು

    ದೇಹ ಸೊಕ್ಕಿ ನಿಂತಿತ್ತು
    ದ್ವೇಷ ಹೊತ್ತಿ ಉರಿದಿತ್ತು
    ಬದುಕು ಬೆಳಗದೆ ನಂದಿತ್ತು

ಮನಸು ವಿರಹದಿ ನಲುಗಿತ್ತು
ಬದುಕು ಬೆಳಗದೆ ನಂದಿತ್ತು
ಹರೆಯ ತುಂಬಿ ಬಂದಿತ್ತ್ತು!

ಮಂಗಳವಾರ, ಅಕ್ಟೋಬರ್ 19, 2010

ಬೇಬೀಸ್ ಬಸ್ ಔಟ್


ಒಂದಿನಾನೂ ತಪ್ದೆ ಸರಿಯಾಗಿ ಬೆಳೆಗ್ಗೆ ೬.೩೦ಗೆ ಕೂಗಕ್ಕೆ ಶುರು ಮಾಡ್ಬಿಡತ್ತೆ ನನ್ ಮೊಬೈಲು. ನಾನ್ ದಿನಾ ನಾಲ್ಕ್‌ ಸರಿ ಅದನ್ನ ತೆಪ್ಪಗಾಗ್ಸಿ ಮುಕ್ಕಾಲ್ಗಂಟೆ ಆದ್ಮೇಲೇ ಎದ್ದೇಳದು ಅಂತ ಗೊತ್ತಿದ್ರೂ ಒಂದೈದ್ ನಿಮಿಷನೂ ಹಿಂದೆ-ಮುಂದೆ ಹೊಡ್ಕೊಂಡಿಲ್ಲ. ಅವತ್ತೂ ಹಾಗೇ ಆಯ್ತು. ಎಲ್ಲಾ ದಿನದ್ ತರ ಅವತ್ತೂ ಒಂದೈದ್ ಸರ್ತಿ ಸ್ನ್ನೂಜ್ ಮಾಡಿದ್ಮೇಲೇನೇ ಎದ್ದಿದ್ದು. ದಡಬಡ ಅಂತ ತಯಾರಾಗಿ, ಅಜ್ಜಿಗೆ ಒಂದ್‌ಸರ್ತಿ ಮುಖ ತೋರ್ಸಿ ಬೈಕ್ ಹತ್ತಿ ಐ.ಟಿ.ಪಿ.ಬಿ ಬಾಗ್ಲಿಗೆ ಬಂದಾಗ್ಲೇ ನಾನ್ ನನ್ ಐಡಿ ಮರ್ತು ಬಂದಿರದು ಗೊತ್ತಾಗಿದ್ದು. ೮ ಗಂಟೆ ಒಳಗೆ ಲಾಗ್‌ಇನ್ ಆಗ್ತಿದೌನು ೯ ದಾಟಿದ್ಮೇಲೆ ಮನೆ ಬಿಡಕ್ಕೆ ಶುರುಮಾಡಿ ಬಾಳಾ ದಿನಾನೇ ಆಗಿತ್ತು. ಇವತ್ತು ಸಮಯ ಆಗ್ಲೇ ೯.೪೦ ದಾಟಿತ್ತು. ಬಿಗ್‌ಬಜಾರ್, ಎಸ್.ಎ.ಪಿ ಹತ್ರ ಟ್ರಾಫಿಕ್ ನೆನೆಸ್ಕೊಂಡು ಮತ್ತೆ ಮನೆ ತಂಕಾ ಹೋಗ್ಬರಕ್ಕೆ ಬೇಜಾರಾಯ್ತು. ಐ.ಟಿ.ಪಿ.ಬಿ ಬಾಗ್ಲಲ್ಲಿ ಸಂದರ್ಶಕರ ಪಾಸ್ ತಗೋಳೋಕ್ನಿಂತಿರೋರ್ನ ನೋಡಿ ಆ ಅರ್ಧ ಮೈಲಿ ಸಾಲಲ್ಲಿ ನಿಂತು ಕಾಯೋಕಿಂತ ಮುಕ್ಕಾಲ್ಗಂಟೆ ಟ್ರಾಫಿಕ್‌ನಲ್ಲಿ ಮನೆಗೆ ಹೋಗಿಬರೋದೇ ವಾಸಿ ಅಂನ್ಕೊಂಡೆ.


ಅಂದ್ಕೋಂಡ ಹಾಗೇ ಟ್ರಾಫಿಕ್‌ ಜಾಸ್ತಿನೇ ಇತ್ತು. ಅಡ್ಡ ನುಗ್ಗೋರ್ನ ಬೈಕೊಂಡು, ಫುಟ್‌ಪಾತ್ ಮೇಲೆ ಬೈಕ್ ಹತ್ತಿಸಿ ಮನೆ ಸೇರೋದ್ರೊಳಗೆ ಸಮಯ ಆಗ್ಲೇ ೧೦.೩೦ ದಾಟಿತ್ತು. ಹ್ಮೂಂ, ಇವತ್ತು ರಜ ಹಾಕ್ಬಿಡಣ ಅಂತ ಯೋಚ್ನೆ ಬಂತು. ಏನಾದ್ರು ಆಗ್ಲಿ ಆಫಿಸ್‌ಗೆ ಬೇಗ ಹೋಗಿ ಮಾಡೋದೂ ಅಷ್ಟರಲ್ಲೇ ಇದೆ ಅಂದ್ಕೊಂಡು ಪುನಃ ಹೊರಟೆ. ಯಾವತ್ತೂ ಇಲ್ಲದ ಟ್ರಾಫಿಕ್ ಇವತ್ತು ಸಿ.ಎಮ್.ಆರ್ ಹತ್ರದಿಂದನೇ ಕಚ್ಕೋಂಡಿತ್ತು. ನಮ್ ವೋಲ್ವೋ ಬಸ್‌ಗಳೋ, ರಸ್ತೆ ಮಧ್ಯೆ ನಿಲ್ಲಿಸಿ ಜನರನ್ನ ಇಳಿಸ್ತಾವೆ. ಅಂಥಾ ೩ ಬಸ್‌ಗಳು ನನ್ನ ಮುಂದೆ ಟ್ರಾಫಿಕ್ಕಿಗೆ ನಾನ್ ಕಾರಣ ಅಲ್ಲ ಅನ್ನೋತರ ಒಂದನ್ನೊಂದು ಓವರ್‌ಟೇಕ್ ಮಾಡೋ ಆತುರದಲ್ಲಿ ಪೂರ್ಣ ರಸ್ತೆ ಜಾಮಾಗಿತ್ತು. ಒಳ್ಳೇ ಕಥೆ ಆಯ್ತಲ್ಲಾ, ಇವತ್ತು ಮೇಲ್‌ ಚೆಕ್ ಮಾಡಿದ ತಕ್ಷಣ ಕ್ಯಾಂಟೀನ್‌ಗೆ ಹೋಗೋದು ಬೇಡ, ಒಟ್ಟಿಗೇ ಊಟಕ್ಕೇ ಹೋದ್ರೆ ಆಯ್ತು ಅಂತ ಮನಸ್ನಲ್ಲೇ ಲೆಕ್ಕಾಚಾರಾ ಹಾಕ್ಕೊಂಡೆ. ಅಷ್ಟರಲ್ಲಿ ಸ್ನೇಹಿತನೊಬ್ಬಂಗೆ ನನ್ನ ನೆನಪಾಗಿ ಕಾಲ್ ಮಾಡ್ದ. ಹೇಗೂ ಒಂದಿಂಚೂ ಮುಂದೆಹೋಗೋಕಾದ್ತಿರ್ಲಿಲ್ಲ, ಹೆಲ್ಮೆಟ್ ತೆಗೆದು ಮಾತಾಡೋಕ್ಕೆ ಶುರು ಮಾಡ್ದೆ. ನಾನ್ ೫ ನಿಮಿಷ ಮತಾಡಿ ಮುಗ್ಸಿದ್ರೂ ಟ್ರಾಫಿಕ್ ಕ್ಲಿಯರ್ ಆಗೋ ಯಾವ್ದೇ ಲಕ್ಷಣ ಕಾಣಿಸ್ತಿರ್ಲಿಲ್ಲ. ಸರಿ, ಇನ್ನೇನ್ ಮಾಡೋದು, ಸುತ್ತಾ ಮುತ್ತಾ ಇರೋ ಜನ್ರನ್ನಾ,ಎದುರುಗಡೆಯಿಂದ ಬರೋ ವೊಲ್ವೋಗಳನ್ನಾ, ಅದ್ರಲ್ಲಿರೋ ಹುಡ್ಗೀರ್ನ ಜನರನ್ನ ನೋಡ್ತಾ ನಿಂತ್ಕೊಂಡಿದ್ದೆ. ಐ.ಟಿ ನವ್ರು ಜಾಸ್ತಿ ಕೊಟ್ರೆ ಏನೂ ಆಗಲ್ಲಾ ಅಂತಾನೋ, ಅತ್ವಾ ಮಾಮೂಲಿ ಬಸ್‌ಗಳಿಗೆ ಅವ್ರು ಹತ್ತಲ್ಲ ಅಂತಾನೋ,ನಮ್ ರೂಟಲ್ಲಿ ಮಾಮೂಲಿ ಬಸ್‌ಗಳಿಗಿಂತ ವೋಲ್ವೂಗಳೇ ಜಾಸ್ತಿ.


ಐ.ಟಿ.ಪಿ.ಎಲ್‌ಗೆ ಹೋಗೋ ರಸ್ತೆ ಜಾಮಾಗಿದ್ರೂ ವಾಪಸ್ ಬರೋ ರಸ್ತೆ ಅಷ್ಟು ಟ್ರಾಫಿಕ್ ಇಲ್ರಿಲ್ಲ. ಅಷ್ಟರಲ್ಲಿ ಮೆಜೆಷ್ಟಿಕ್‌ಗೆ ಹೊರಟ್ಟಿದ್ದ ವೋಲ್ವೋ ಯಾವ್ದೂ ರೇಸ್ನಲ್ಲಿ ಬಿದ್ದಿರೋ ತರಾ ಜನರನ್ನ ಇಳಿಸಿ ಮುಂದೆ ಹೋಯ್ತು. ಮುಕ್ಕಾಲು ಇಂಜಿನೀರಿಂಗ್ ಕಾಲೇಜ್‌ನವ್ರಿದ್ರು. ಅವರೆಲ್ಲರ ಜೊತೆ ಒಂದು ೨-೩ ವರ್ಷದ ಮಗೂನೂ ಇಳಿದಿತ್ತು. ಟಿ.ವಿ ಜಾಹಿರಾತುಗಳಲ್ಲಿ ಬರುತ್ವಲ್ಲಾ, ಹಾಗೆ, ತುಂಬಾ ಮುದ್ದಾಗಿತ್ತು. ಮಾಮೂಲಿ ರೀತಿಲಿ ನಾನು ದೂರದಿಂದಲೇ 'ಹಾಯ್' ಮಾಡ್ದೆ. ಒಂದ್ಸರ್ತಿ ನನ್ನ ನೋಡಿ ಸ್ವಲ್ಪ ನಕ್ಕು ಬೇರೆ ಕಡೆ ತಿರುಗ್ಬಿಡ್ತು. ಅದ್ರ ಶೂ ನೆಡೆದಾಗ 'ಪುಯ್-ಪುಯ್' ಅನ್ನುತ್ತಲ್ಲಾ, ಆತರದ್ದು. ನಾವೆಲ್ಲಾ ಟ್ರಾಫಿಕ್ ಮಧ್ಯೆ ಯಾವ್ದೋ ಚಿಂತೆಲಿ ಮುಳ್ಗಿರೋ ಹೊತ್ತಲ್ಲಿ ಯಾವ್ ಚಿಂತೇನೂ ಇಲ್ದೇ ಆರಾಮವಾಗಿ ನಗ್ತಿರೋ ಮಗೂ ನೋಡಿ ಒಂದು ಕ್ಷಣ ನಾನು ಕಳೆದು ಹೋಗಿದ್ದು ಸುಳ್ಳಲ್ಲ.


ಬಸ್‌ನಿಂದ ಇಳಿದ ಜನ ಸ್ವಲ್ಪ ಹೊತ್ತಲ್ಲಿ ಅವರವರ ಪಾಡಿಗೆ ನಡೆದು ಹೋದ್ರು. ಅಯ್ಯೋ, ಮಗು ಮಾತ್ರಾ ಒಂದೇ ನಿಂತಿದೆ. ಯಾರಾದ್ರು ಜೊತೆಗೆ ಇದ್ದಾರಾ ಅಂತ ನಾನು ನಿಂತಲ್ಲೇ ಹುಡುಕ್ತಿದ್ದೆ, ಅದು ಕಿಟಾರನೆ ಚೀರಿ ಅಳೋಕೆ ಶುರು ಮಾಡ್ತು... ಇನ್ನೂ ಒಂದೆರಡು ಕ್ಷಣ ನೋಡಿದೆ, ಊಹ್ಮೂಂ, ಯಾರೂ ಮಗು ಕಡೆಯವ್ರು ಅದರ ಹತ್ರ ಬತ್ರಿಲ್ಲ... ಮಗು ಬಸ್‌ನಿಂದಾನೇ ಇಳೀತಾ ಅಥವಾ ಮೊದ್ಲೇ ಅಲ್ಲೇ ಇತ್ತಾ? ಬಸ್‌ನಿಂದ ಇಳಿದ್ಮೇಲೆ ಮಗೂನ ಬಿಟ್ಟು ಹೋಗ್ಬಿಟ್ರಾ? ಅಥ್ವಾ ಮಗು ತಾನು ಮಾತ್ರಾ ಬಸ್‌ನಿಂದ ಇಳ್ಕೋಂಡ್‌ಬಿಡ್ತಾ??? ತಲೇಲಿ ತರಾವರಿ ಯೋಚನೆಗಳು ಬಂದು ಹೋದ್ವು. ತಿರುಗಿ ನೋಡ್ದೆ, ಟ್ರಾಫಿಕ್ ಸಾಗರದ ಮಧ್ಯೆ ಆ ಬಸ್ ಇನ್ನೂ ಕಾಣ್ತಾ ಇತ್ತು. ನನ್ ಬೈಕ್‍ನ ಅಲ್ಲೇ ಬಿಟ್ಟು ಮಗು ಹತ್ರ ಓಡ್ದೆ. 'ಹಲೋ, ಈ ಮಗು ನಿಂಮ್ದಾ...?' ಅಂತ ಸ್ವಲ್ಪ ದೂರ ನಿಂತಿದ್ದವನ್ರೆಲ್ಲಾ ಕೇಳಿದ್ರೂ ಹೌದು ಇಲ್ಲ ಅಂತಾ ಕೂಡಾ ಉತ್ರ ಕೊಡ್ದೆ ಜನ ನಿಂತಿದ್ರು. ಉಫ್, ನಾನು ಇರೋದು ಬೆಂಗ್ಳೂರಲ್ಲಿ ಅಂತ ನೆನಪ್ಮಾಡ್ಕೊಂಡು ಇಂಗ್ಲೀಷ್‌ನಲ್ಲೂ ಕೇಳಿದ್ದಾಯ್ತು (ನಂಗೆ ತಮಿಳು, ತೆಲುಗು ಬರೋಲ್ಲ). ಈಗ 'ನೋ' ಅಂತಾ ಉತ್ರ ಸಿಕ್ಕಿದ್ದೇ ಲಾಭ. ಮಗು ಬಸ್ ಕಡೆ ಕೈ ತೋಸ್ರಿ 'ಮಮ್ಮಿ...' ಅಂತ ಅಳ್ತಿರೋದ್ ಬಿಟ್ಟು ಇನ್ನೇನೂ ಮಾತಾಡ್ತಿಲ್ಲ. ನಿನ್ನಪ್ಪ, ಅಮ್ಮ ಎಲ್ಲಿ ಅಂತಾ ಮಗೂನ ಕನ್ನಡ ಇಂಗ್ಲೀಷ್ ಎರಡರಲ್ಲೂ ಕೇಳ್ದೆ. ಅಳೋದ್ ಬಿಟ್ಟು ಇನ್ನೇನೂ ಹೇಳ್ಲಿಲ್ಲ.


ನನ್ ಹತ್ರ ಇದಿದ್ದು ೩ ದಾರಿ. ಒಂದು ಮಗೂನ ಅಲ್ಲೆ ಬಿಟ್ಟು ನನ್ ಪಾಡಿಗೆ ನಾನು ಆಫಿಸ್‌ಗೆ ಹೋಗ್ಬಿಡೋದು. ಎರಡನೇದು ಪೋಲೀಸ್‌ಗೆ ಮಗೂ ಕೊಡೋದು. ಕಡೇದು ಇನ್ನೂ ಕಾಣ್ತಿರೋ ಬಸ್‌ನ ಫಾಲೋ ಮಾಡಿ ಹಿಡ್ದು, ಅದರಲ್ಲಿ ಮಗೂ ಕಡೆಯವ್ರು ಇದ್ದಾರಾಂತ ನೋಡೋದು. ಮಗೂನ ಅಲ್ಲೇ ಬಿಟ್ಟು ಹೋಗಕ್ಕೆ ಮನಸಾಗ್ಲಿಲ್ಲ. ಮೊದ್ಲು ಬಸ್‌ನಲ್ಲಿ ನೋಡಿ ಅಲ್ಲಿ ಸಂಬಂಧ ಪಟ್ಟವ್ರು ಯಾರೂ ಇರ್ಲಿಲ್ಲ ಅಂದ್ರೆ ಪೋಲೀಸ್‌ಗೆ ಕೊಟ್ಟ್ರಾಯ್ತು ಅಂತ ಅಂದ್ಕೊಂಡು ಮಗೂನ ಎತ್ಕೊಂಡೆ. ಯಾರಾದ್ರು ತಪ್ಪಾಗಿ ತಿಳ್ಕೋಂಡು ಧರ್ಮದೇಟು ಕೊಡೋಕ್ಕೆ ಬರ್ತಿದ್ದಾರಾ ಅಂತ ನೋಡ್ದೆ. ಸುತ್ತಾ ಮುತ್ತಾ ಇದ್ದ ಜನ ಕಳ್ಳನನ್ನ ನೋಡೋತರ ನೋಡಿದ್ರೆ ಹೊರ್ತು ಯಾರಪ್ಪ ನೀನು, ಮಗು ಯಾರ್ದು ಅಂತ ಕೇಳೋ ಗೋಜಿಗೇ ಹೋಗ್ಲಿಲ್ಲ. ಜಾಸ್ತಿ ರಂಪಾಟ ಮಾಡ್ದೆ ಮಗು ಸುಮ್ನೆ ನಂಜೊತೆ ಬಂತು. ರೋಡ್ ಕ್ರಾಸ್ ಮಾಡಿ ನನ್ ಬೈಕ್ ಹತ್ರ ಬರೋ ಹೊತ್ತಿಗೆ ಸ್ವಲ್ಪ ಟ್ರಾಫಿಕ್ ರಿಲೀಸ್ ಆಗಿತ್ತು. ಹತ್ತಿರದಲ್ಲಿ ಯು ಟರ್ನ್ ಇರ್ಲಿಲ್ಲ. ಮುಂದೆ ಹೋಗಿ ಯು ಟರ್ನ್ ತಗೊಂಡು ಬರೋತನಕ ಬಸ್ ನನಗಾಗಿ ಕಾಯ್ತಾ ನಿಂತಿರುತ್ತೆ ಅನ್ನೋ ಭ್ರಮೆಗೆ ಒಳಗಾಗ್ದೆ ರಾಂಗ್ ಸೈಡ್‌ನಲ್ಲೇ ಗಾಡಿ ಓಡಿಸ್ಕೋಂಡ್ ಹೊರ್ಟೆ.


ಎದುರಿಗೆ ಸಿಕ್ಕವರೆಲ್ಲಾ ನನ್ನ ಕೆಕ್ಕರಿಸಿ ನೋಡ್ತಿದ್ರು (ರಾಂಗ್ ಸೈಡ್‌ ಯಾರಾದ್ರು ಬಂದ್ರೆ ನಾನೂ ಹಾಗೇ ನೋಡೋದು ಬಿಡಿ). ಇಷ್ಟೋತಂಕ ಅಳ್ತಿದ್ದ ಮಗು ಈಗ ಸ್ವಲ್ಪ ಸುಮ್ಮನಾಗಿ ಸರ್ಕಸ್ ರೈಡ್ ಎಂಜಾಯ್ ಮಾಡ್ತಿತ್ತು. ಟಾಟಾ ಮೋಟಾರ್ಸ್ ಹತ್ರ ಎಡಗಡೆ ರೋಡಿಗೆ ಸೇರೋಕ್ಕೆ ಜಾಗ ಇತ್ತು. ಇನ್ನೇನು ಬೈಕ್ ಪಕ್ಕಕ್ಕೆ ತಿರುಗಿಸಬೇಕು, ಎದುರಿನಿಂದ ಬಂದ (ಅವ್ರು ಸರಿಯಾಗೇ ಬರ್ತಿದ್ರು, ನಾನೇ ರಾಂಗ್‌ಸೈಡ್ ನಲ್ಲಿದ್ದೆ) ಒಂದು ಸ್ವಿಫ್ಟ್ ಯು ಟರ್ನ್ ತಗೋಳಕ್ಕೆ ಹೋಗಿ ಹಿಂದೇನೂ ಹೋಗಕ್ಕಾಗ್ದೆ, ಮುಂದೆನೂ ಬರೋಕ್ಕಾಗ್ದೆ ಸಿಕ್ಕಾಕ್ಕೋಂಡ್ ಬಿಡ್ತು. ಸಾಮಾನ್ಯವಾಗಿ ಇಂತಾ ಸನ್ನಿವೇಶಗಳು ಎದುರಾದಾಗ ಡ್ರೈವರ್ ಹುಡುಗನೋ, ಹುಡುಗಿಯೋ, ಅಜ್ಜನೋ ಅಜ್ಜಿಯೋ ಅಥವಾ ಲೈಸನ್ಸ್ ಇಲ್ಲದಿರೋ ಮಕ್ಕಳೋ ಅಂತ ಒಂದು ಊಹೆ ಮಾಡೊದು ನನ್ನ ಅಭ್ಯಾಸ. ಈ ಬಾರಿಯೂ ನನ್ನ ಊಹೆ ಸರಿಯಾಗಿತ್ತು. ಡ್ರೈವರ್ ಸೀಟ್‌ನಲ್ಲಿರೋರು ಗಾಬರಿಯಾಗಿ ಚಡಪಡಾಯಿಸ್ತಿರೋದು ಕಾಣಿಸ್ತಿತ್ತು. ಇದೆಲ್ಲಾ ಸರ್ಕಸ್‌ಗಳು ನಡಿತಿರ್ಬೇಕಾದ್ರೆ ಬಸ್ ಮುಂದೆ ಹೋಗಿದ್ದು ಕಾಣಿಸ್ತು. ಜನ ಏನಾರ್ದು ಬೈಕೊಳ್ಳಿ ಅಂತ ಅಂದ್ಕೋಂಡು ಎಲ್ಲರ ಮಧ್ಯೆನೇ ಬೈಕ್ ನುಗ್ಸಿ ಎಡಗಡೆಗೆ ಬಂದೆ. ಬಸ್ ಆಗ್ಲೇ ಬ್ರೂಕ್‌ಫೀಲ್ಡ್ ನಿಲ್ದಾಣದಿಂದ ಮುಂದೆ ಹೋಗಿತ್ತು. ನನ್ ಸ್ನೇಹಿತ್ರು ಹೇಳೋ ಭಾಷೆಲಿ, ವಿಡಿಯೋ ಗೇಮ್ ತರ ಬೈಕ್ ಓಡಿಸ್ಕೋಂಡು ಹೋದೆ. ಕಾಸ್ಮೋಸ್ ಹತ್ರ ಹೊಸ್ದಾಗಿ ಹಂಪ್ ಹಾಕಿದ್ರು. ಅದ್ರ ಮುಂದೆ ಯಾದುದೋ ನದಿಯ ಮೂಲ ಹರಿದು ಹೋಗ್ತಿತ್ತು (ನಾವು ೨ ವರ್ಷದ ಹಿಂದೆ ಮನೆ ಹುಡ್ಕಕ್ಕೆ ಈ ಏರಿಯಾದಲ್ಲಿ ಅಡ್ಡಾಡ್ಬೇಕಾದ್ರೆ ಮೊದಲಸಲ ನೋಡಿದ್ದೆ. ಬಹುಶಃ ಈ ನದಿ ಮೂಲಕ್ಕೆ ಇನ್ನೂ ದೊಡ್ದ ಇತಿಹಾಸ ಇರಬಹುದು. ಹನಿ-ಹನಿ ಉಳಿಸಿ ಅಂತ ಹೊಡ್ಕೊಳ್ಳೊ ಮಹಾನಗರಪಾಲಿಕೆಗೆ ವರ್ಷಗಳಿಂದ ನಿರಂತರ ಸೋರ್ತಿರೋ ಪೈಪ್ ಸರಿ ಮಾಡೋ ಮನಸ್ಸಾಗಿಲ್ಲ). ಅನಿವಾರ್ಯವಾಗಿ ಸ್ಪೀಡ್ ಕಮ್ಮಿ ಮಾಡ್ಕುಳ್ಳೇಬೇಕಾಯ್ತು. ಸರಿ, ಅಲ್ಲಿಂದ ರಿಲಯನ್ಸ್ ಫ್ರೆಶ್ ತನಕ ರೇಸ್ ನಡ್ಸಿದ್ರೂ ಕುಂದಲಹಳ್ಳಿ ಸರ್ಕಲ್ ಸಿಗ್ನಲ್‌ನಲ್ಲಿ ನನ್ನ ಮತ್ತು ಬಸ್ ಮಧ್ಯೆ ಹತ್ತಾರು ಬೇರೆ ವಾಹನಗಳು ಸೈಕಲ್ ಕೂಡಾ ಹೋಗೋಕ್ಕಾಗ್ದಷ್ಟು ಒತ್ತಾಗಿ ನಿಂತ್ಕೊಂಡಿದ್ವು. ಗಾಡಿ ಅಲ್ಲೇ ನಿಲ್ಸಿ ಮಗೂ ಎತ್ಕೋಂಡ್ ಬಸ್ ಹತ್ರ ಓಡ್ಬೇಕು ಅಂತ ಗಾಡಿಯಿಂದ ಇಳ್ಯಕ್ಕೂ, ಸಿಗ್ನಲ್ ಬೀಳಕ್ಕೂ ಸರಿಹೋಯ್ತು. ಇನ್ನೂ ಹಸಿರು ದೀಪ ಹತ್ತಿಲ್ಲ, ಆಗ್ಲೇ ನಮ್ ಬಸ್ ಡ್ರೈವರ್ ಮಹಾಶಯ ಬಲಗಡೆ ಮಾರುತಹಳ್ಳಿ ಕಡೆ ಬಸ್ ತಿರುಗಿಸಿಯಾಗಿತ್ತು (ಭಾರತದಲ್ಲಿ ಎಫ್೧ ರೇಸ್ಗಳು ಯಾಕೆ ಜಾಸ್ತಿ ಪ್ರಸಿದ್ದಿಯಲ್ಲಿಲ್ಲ ಅಂತ ಅವತ್ತು ಗೊತ್ತಾಯ್ತು. ಜನಕ್ಕೆ ದಿನಾ ರೇಸ್ ಮಾಡಿ, ಎಫ್೧ನಲ್ಲಿ ಏನೂ ಸ್ಪೆಷಲ್ ಕಾಣೋಲ್ವೇನೋ!). ನಾನು ಕುಂದಲಹಳ್ಳಿ ಸರ್ಕಲ್ ಕ್ರಾಸ್ ಮಾಡೋ ಹೊತ್ತಿಗೆ ಬಸ್ ಒಂದು ಸ್ಟಾಪ್ ಕೊಟ್ಟು ಮುಂದೆ ಹೊರಟಾಗಿತ್ತು. ಆ ರೋಡ್ನಲ್ಲಿ ಟ್ರಾಫಿಕ್ಕೇ ಇರ್ಲಿಲ್ಲ. ಮಾರುತಹಳ್ಳಿ ಬ್ರಿಡ್ಜ್ ಮೇಲೆ ಇದ್ದ ಟ್ರಾಫಿಕ್ಕಿಗೇ ಮತ್ತೆ ಬಸ್ ನಿಂತಿದ್ದು. ಈ ಸಾರಿ ಯಾವ್ದೇ ತಪ್ಪು ಮಾಡ್ದೇ ಬಸ್ನ ಹಿಂದೆನೇ ಹೋಗಿ ಬೈಕ್ ನಿಲ್ಲಿಸಿ ಮಗು ಎತ್ಕೊಂಡು ಬಸ್ ಬಾಗಿಲಿನ ಹತ್ರ ಓಡಿದೆ.


ಹಿಂದೆ ೩ ಸ್ಟಾಪ್‌ಗಳಲ್ಲಿ ಮಗು ಕಡೆಯವ್ರು ಇಳ್ಕೋಂಡ್ ಬಿಟ್ರಾಂತ ಒಂದು ಸಣ್ಣ ಭಯ ಶುರುವಾಗಿತ್ತು. ಬಸ್ ಪಕ್ಕಕ್ಕೆ ಹೋಗ್ತಿದ್ದ ಹಾಗೇ ಪಪ್ಪಾ... ಅಂತ ಯಾರನ್ನೋ ತೋರ್ಸಿ ಅಳೋಕ್ಕೆ ಶುರು ಮಾಡ್ತು. ಉಫ್, ನಾನು ಮೊದಲಸಲ ಒಂದು ಮಗು ಅಳೋದು ಕೇಳಿ ಖುಷ್ ಆಗಿದ್ದೆ. ಆ ವ್ಯಕ್ತಿ ಸುಮಾರು ೩೫ರ ಆಜುಜಾಜಿನವರಿರಬೇಕು. ಮಗೂನ ಕಿಡ್ಕಿಲಿ ನೋಡಿದ ತಕ್ಷಣ ಬಾಗಿಲು ತೆಗ್ಸಿ ಓಡಿ ಬಂದ್ರು. ಆಚೆ ಬಂದವ್ರೇ "೧ ಮಿನಿಟ್ ಸಾರ್..." ಅಂತೇಳಿ ಮತ್ತೆ ಬಸ್ ಒಳಗೆ ಓಡಿದ್ರು, ಮಗು ನನ್ ಹತ್ರಾನೇ ಬಿಟ್ಟು! ಇದೋಳ್ಳೇ ಕಥೆ ಆಯ್ತಲಪ್ಪಾ ಅಂತ ಏನೂ ಅರ್ಥ ಆಗ್ದೇ ನಿಂತಿದ್ದೆ. ಈ ನಡುವೆ ಮಗು ಮತ್ತೆ ಅಳು ನಿಲ್ಲಿಸಿತ್ತು. ಬಸ್‍ನಿಂದ ಆ ವ್ಯಕ್ತಿ ಒಬ್ಬರು ಹೆಂಗಸಿನ ಜೊತೆ ಹೊರಗೆ ಬಂದ್ರು. ಮಗುವಿನ ತಾಯಿ ಅದನ್ನ ಎಳ್ಕೋಂಡು ತಬ್ಬಿ ಅಳೋಕ್ಕೆ ಶುರು ಮಾಡಿದ್ರು. ಇಷ್ಟೋತಂಕ ಸುಮ್ನಿದ್ದ ಮಗೂನೂ ಅಳೋಕೆ ಶುರು ಮಾಡ್ತು. ನಂಗೆ 'ಥ್ಯಾಂಕ್ಸ್ ಸಾರ್..' ಅಂತೇಳಿದ ಆ ವ್ಯಕ್ತಿ ಮಗು ತಾಯಿನ ಹಿಂದಿ ತರಾ ಕೇಳೋ ಭಾಷೆಲಿ ಬಯ್ಯೋಕ್ಕೆ ಶುರು ಮಾಡ್ದ. ನಂಗೆ ಆಫಿಸ್ ನೆನಪಾಗಿ, ಮಾಮೂಲಿ ಬೈಗುಳ ಬೈದು, ಮಗು ಒಂದೇ ಹೇಗೆ ಬಸ್‌ನಿಂದ ಕಳಗಿಳಿತು ಅಂತ ತಿಳ್ಕೋಂಡು ಹೊರಟೆ. ತಿರುಗಿ ನೋಡಿದೆ, ಮಗು ಇನ್ನೂ ಬಿಕ್ಕಳಿಸಿ ಅಳುತ್ತಿತ್ತು.


ಮುಂದೆ ಅರ್ಧ ಕಿಲೋಮೀಟರ್ ತನಕ ಯು ಟರ್ನ್ ಇರ್ಲಿಲ್ಲ. ೧೧.೧೫ ದಾಟಿದ್ರೂ ಆಫಿಸ್‌ನಲ್ಲಿ ಲಾಗ್‌ಇನ್ ಆಗಿ, ಕ್ಯಾಂಟೀನ್‌ನಲ್ಲಿ ಟೀ ಹೀರುತ್ತಾ ಎಲ್ಲವನ್ನೂ ಮತ್ತೆ ಯೋಚಿಸಿದೆ. ಅಲ್ಲಿ ಆದದ್ದಿಷ್ಟು, ಐ.ಟಿ.ಪಿ.ಎಲ್ ಹತ್ರ ಮಗು ಮತ್ತು ಅದರ ತಂದೆ ಬಸ್‌ನ ಹಿಂದಿನ ಸೀಟ್‌ನಲ್ಲಿ ಕುಳಿತ್ತಿದ್ದಾರೆ, ಅದರ ತಾಯಿ ಮುಂಭಾಗದ ಸೀಟ್‌. ಸ್ವಲ್ಪ ಹೊತ್ತಿನಲ್ಲಿ ಆಕೆಗೆ ನಿದ್ದೆ ಹತ್ತಿದೆ. ಮಗು ತಾಯಿ ಹತ್ರ ಹೋಗ್ಬೇಕು ಅಂತ ಹೇಳಿದಕ್ಕೆ ಅದರ ತಂದೆ ಮುಂದೆ ಇದ್ದಾರೆ ಹೋಗು ಅಂತ ಬಿಟ್ಟು ತಾನೂ ನಿದ್ದೆ ಮಾಡಿದ್ದಾರೆ. ಅಷ್ಟರಲ್ಲಿ ಸಿ.ಎಮ್.ಆರ್ ಸ್ಟಾಪ್ ಬಂದಿದೆ. ಬೇರೇ ಜನಗಳ ಜೋತೆ ಮಗೂನೂ ಇಳ್ಕೋಂಡ್ಬಿಟ್ಟಿದೆ...

ಗುರುವಾರ, ಸೆಪ್ಟೆಂಬರ್ 30, 2010

ತುಮುಲ

ದಟ್ಟಡವಿಯ ಪಯಣದಲಿ ಹೊತ್ತು ಮುಗಿಯುವ ಮುನ್ನ
ನಿಶೆಯು ಆವರಿಸೆ ನೀ ಅಳುಕದಿರು ಮನವೇ...

ಮರುಭೂಮಿ ಮಡಿಲಲ್ಲಿ ಬಾಯಾರಿ ಅಲೆವಾಗ
ಮರಳ ಮರೀಚಿಕೆಯ ಕಂಡು ಸೋಲದಿರು ಮನವೇ...

ಭರವಸೆಯ ಬೆನ್ನತ್ತಿ ಕನಸ ಕುದುರೆಯನೇರೆ
ಸ್ವಪ್ನ ಗೋಪುರವ ಕಂಡು ಮರುಗದಿರು ಮನವೇ...

ಸಂಸಾರ ಸಾಗರದಿ ಅಂಬಿಗನು ಮೈಮರೆಯೆ
ಅಲೆಯ ಸೆಳೆತಕ್ಕೆ ನೀ ಅಂಜದಿರು ಮನವೇ...

ಕತ್ತಲೆಯ ಜಗದಲ್ಲಿ ಅಜ್ಞಾನ ಕದನದಲಿ
ನೆರಳೂ ಜೊತೆ ಬಿಡಲು ನೀ ಚಿಂತಿಸದಿರು ಮನವೇ...

ಬದುಕೆಂಬ ಆಟದಲಿ ಸೋಲು ಗೆಲುವುಗಳ
ಮೀರಿ ತಟಸ್ಥ ಭಾವದಿ ಸ್ಥಿತಪ್ರಜ್ಞನಾಗು ಮನವೇ...

ಸೋಮವಾರ, ಆಗಸ್ಟ್ 16, 2010

ನನ್ನರಸಿ... ನಿನ್ನರಸಿ

ನನ್ನರಸಿ ನನ್ನರಸಿ, ಕಾದಿರುವೆ ನಿನ್ನರಸಿ
ಬರಡಾದ ಬಾಳಿಗೆ ನೆರಳನು ತೋರೆ
ಆವರಿಸಿ, ನನ್ನ ನೀ ವರಿಸಿ

ನನ್ನರಸಿ ನನ್ನರಸಿ, ಬಸವಳಿದೆ ನಿನ್ನರಸಿ
ಉಸಿರಾಗಿ ಬಂದು ಹಸಿರನು ತಾರೆ
ಮಳೆ ಸುರಿಸಿ, ಪ್ರೀತಿಯ ಮಳೆ ಸುರಿಸಿ

ನನ್ನರಸಿ ನನ್ನರಸಿ, ದಣಿದಿರುವೆ ನಿನ್ನರಸಿ
ಮನದೊಳು ಚಿಮ್ಮಿಸೆ ಅಮೃತ ಧಾರೆ
ಸುಧೆ ಹರಿಸಿ, ಒಲವಿನ ಸುಧೆ ಹರಿಸಿ

ನನ್ನರಸಿ ನನ್ನರಸಿ, ಬಳಲಿರುವೆ ನಿನ್ನರಸಿ
ಸಿಹಿ ಕಹಿ ಹಂಚಿ ಬಾಳಲು ಬಾರೆ
ಕಣ್ಣೊರೆಸಿ, ನನ್ನಯ ಕಣ್ಣೊರೆಸಿ

ಚಿತ್ರ ಕೃಪೆ: FCIT

ಗುರುವಾರ, ಮೇ 20, 2010

ನಾ ಕೂಡ ನಲಿವೆ

ನಮ್ಮೂರ ಜಾತ್ರೆಲ್ಲಿ ಕಪ್ಪಡರೋ ಹೊತ್ತಲ್ಲಿ
ನನಗಾಗಿ ಕಾದಿದ್ದು ನಿಜವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ರಥಬೀದಿ ಬದಿಯಲ್ಲಿ ಗೆಳತಿಯರ ಸಂದಲ್ಲಿ
ಕುಡಿನೋಟ ಬೀರಿದ್ದು ದಿಟವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಮುಸ್ಸಂಜೆ ಮಬ್ಬಲ್ಲಿ ನಿನ್ನ ತುಟಿಯಂಚಲ್ಲಿ
ನನಗಲ್ಲಿ ಕಂಡಿದ್ದು ನಗುವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಮರೆಯಾಗೋ ಮೊದಲಲ್ಲಿ ನಿನ್ನ ಕಣ್ಣಂಚಲ್ಲಿ
ಮಿಂಚಾಗಿ ಮೂಡಿದ್ದು ಒಲವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಗುರುವಾರ, ಏಪ್ರಿಲ್ 15, 2010

ದೂರ

ಬಗೆಬಗೆಯ ಕನಸು ಮೂಡಿಹ,
ಏಳು ಬಣ್ಣಗಳ ಬದುಕಿನಲಿ,
ಬರಿದಾದ ಮನಸು ಏತಕೆ?
ನೀನಿರಲು ನನ್ನ ಹೃದಯದೊಳು,
ಈ ವಿರಹವೇತಕೆ?
ಮಾತು ಮೌನವಾಗಿಹ,
ಸುಂದರ ಸಮಯದೊಳು ಈ ದೂರವೇತಕೆ?

ಭಾನುವಾರ, ಏಪ್ರಿಲ್ 11, 2010

ಬಯಕೆ

ಕನವರಿಕೆಯ ಮಾತು ನಿನ್ನ ಮನದ ಮೂಲದಿ ತೆರೆಯಲಿ,
ಹಗಲುಗನಸಲಿನ್ನು ಎನ್ನ ನೆರಳು ನಿನಗೆ ತೋರಲಿ,
ಸಿಹಿನಗುವು ಮೂಡಲಿ ಇನ್ನು ನೀ..
ನನ್ನ ಸನಿಹ ಬಯಸಲಿ.

ಬುಧವಾರ, ಮಾರ್ಚ್ 24, 2010

ಪ್ರತಿಬಿಂಬ

ಹೃದಯವೆಂಬ ಕನ್ನಡಿಯಲಿ
ಬಿಂಬಿಸಿದ ನಿನ್ನ ಛಾಯೆಯ
ನಗುವಿನಲಿ ಮರೆಯಲೆತ್ನಿಸಿದೆ
ಆದರೆ ಕಣ್ಣೀರಿನಲಿ ನೀ ಮೂಡಿದ್ದೆ
ನಿದ್ರೆಯಲಿ ಮುಚ್ಚಲೆತ್ನಿಸಿದೆ
ಕನಸಿನಲ್ಲೂ ನೀ ಬಂದು ಕುಳಿತಿದ್ದೆ
ವಿದ್ಯಾರ್ಜನೆಯ ಬೆಳಕ ಹಚ್ಚಿದೆ
ಆ ದೀಪದಡಿಯಲ್ಲಿ ನೀ ನಕ್ಕಿದ್ದೆ
ಕೊನೆಗೆ ಬಳಲಿ ಕನ್ನಡಿಯ ಒಡೆದಾಗ
ನೂರು ಚೂರಿನಲ್ಲೂ ನೀ ಕಾಡುತ್ತಿರುವೆ

ಮಂಗಳವಾರ, ಫೆಬ್ರವರಿ 16, 2010

ಮೌನಾಗ್ನಿ

ಮಲ್ಲಿಗೆಯು ಸುವಾಸನೆ ಬೀರಲಿಲ್ಲ
ನಿನ್ನ ನೀಳ ಕೇಶ ರಾಶಿಯಂತೆ
ನಕ್ಷತ್ರಗಳು ಹೊಳೆಯಲಿಲ್ಲ
ನಿನ್ನ ಕಮಲದ ಕಂಗಳಂತೆ
ಮೊಗ್ಗುಗಳು ಅರಳಲಿಲ್ಲ
ನಿನ್ನ ಹವಳದ ತುಟಿಗಳಂತೆ

ಅಮೃತಶಿಲೆಯು ನುಣುಪಾಗಿ ತೋರಲಿಲ್ಲ
ನಿನ್ನ ಸುಕೋಮಲ ಕೆನ್ನೆಯಂತೆ
ನವಿಲುಗಳು ನಾಟ್ಯ ಮಾಡಲಿಲ್ಲ
ನಿನ್ನ ವೈಯಾರದ ನಡಿಗೆಯಂತೆ
ಹಕ್ಕಿಯ ಕಲರವ ಇಂಪಾಗಿ ಕೇಳಲಿಲ್ಲ
ನಿನ್ನ ಕಾಲ್ಗೆಜ್ಜೆಯ ಸದ್ದಿನಂತೆ

ಹರಿವ ನೀರು ಜುಳು ಜುಳು ನಾದ ಹೊರಡಿಸಲಿಲ್ಲ
ನೀನು ಗುನುಗುನಿಸುವ ಮಧುರ ಮಾತಿನಂತೆ
ಜೇನು ಕೂಡ ಸಿಹಿ ನೀಡಲಿಲ್ಲ
ನಿನ್ನ ಅಧರ ಸ್ಫುರಿಸಿ ನೀಡಿದಂತೆ
ಸೂರ್ಯನ ಕಿರಣವು ಕಾವೇರಿಸಲಿಲ್ಲ
ನಿನ್ನ ಬಿಗಿದಪ್ಪುಗೆಯು ಕಾವೇರಿಸಿದಂತೆ

ಹಾಗೆಯೇ ಬೆಂಕಿ ಕೂಡ ಸುಟ್ಟಿರಲಿಲ್ಲ
ಈ ನಿನ್ನ ಮೌನ ನನ್ನ ಸುಡುತ್ತಿರುವಂತೆ

ಶನಿವಾರ, ಜನವರಿ 30, 2010

ಶುಭಕಾಮನೆ

ಕನವರಿಕೆಗಳನ್ನೆಲ್ಲ ಕನಸುಗಳಾಗಿಸಿ,
ಕನಸುಗಳನ್ನೆಲ್ಲ ಮನಸಿನಾಳಕ್ಕೆ ನಾಟಿಸಿ,
ನನಸಾಗಲೇ ಬೇಕೆಂಬ ಹಠ ಮಾಡಿಸಿ,
ನೋವನ್ನೆಲ್ಲ ಮರೆಸಿ,
ನಲಿವಿಗೆ ದಾರಿ ತೋರಿಸಿ,
ನನ್ನ ಜೀವನಕ್ಕೆ ಪ್ರೀತಿ ತೋರಿಸಿ,
ನನ್ನ ಅಭ್ಯುದಯಕ್ಕೆ ಕಾರಣಳಾದ ಗೆಳತಿಯೇ,
ಕೋರುವೆ ನಿನ್ನ ಜನ್ಮದಿನಕೆ ಹರಸಿ,
ಶುಭಕಾಮನೆ